Zee News ಕನ್ನಡ

352k Followers

ಬೇರೆ ಬೇರೆ ಇಲಾಖೆಗಳಲ್ಲಿ ಡೆಪ್ಯುಟೇಷನ್ ಮೇಲಿರುವವರನ್ನು ವಾಪಸ್ ಮಾತೃ ಇಲಾಖೆಗೆ ಬರುವಂತೆ ಪತ್ರ

25 May 2020.07:13 AM

ಬೆಂಗಳೂರು: ಸಹಕಾರ ಇಲಾಖೆಯಲ್ಲಿ ಈಗ ಮರಳಿ ಮಾತೃ ಸಂಸ್ಥೆಗೆ ಎಂಬ ನಿಟ್ಟಿನಲ್ಲಿ ಕ್ರಮಕ್ಕೆ ಮುಂದಾಗಲಾಗುತ್ತಿದೆ. ಆದರೆ ಇಲ್ಲಿಗೆ ಅಧಿಕಾರಿಗಳೇ ಬಯಸಿ ಬರುತ್ತಿರುವುದಲ್ಲ. ಆದುದರಿಂದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ (ST Somashekhar) ಇಂಥದ್ದೊಂದು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ವಿವಿಧ ಇಲಾಖೆಗಳಲ್ಲಿರುವ ಅಧಿಕಾರಿಗಳನ್ನು ಮರಳಿ ಮಾತೃ ಇಲಾಖೆಗೆ ಕರೆತರುವ ನಡೆಯನ್ನು ಇಟ್ಟಿದ್ದಾರೆ.

ಈ ಮೊದಲು ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನೆ ಇಲಾಖೆಗೆಂದು ನೇಮಕ ಆಗಿದ್ದ ಹಲವರು ಬೇರೆ ಬೇರೆ ಇಲಾಖೆಗಳಿಗೆ ಡೆಪ್ಯೂಟ್ ಆಗಿದ್ದಾರೆ. ಇದರಿಂದ ಇಲಾಖೆಯಲ್ಲಿ ಲೆಕ್ಕಕ್ಕೆ ಹುದ್ದೆಗಳು ಭರ್ತಿಯಾಗಿದ್ದರೂ ಕೆಲಸಕ್ಕೆ ಸಿಬ್ಬಂದಿ ಇಲ್ಲದ ಪರಿಸ್ಥಿತಿಯಂತಾಗಿದೆ.

ಡೆಪ್ಯೂಟ್ ಮಾಡಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ವಿವಿಧ ಜಿಲ್ಲೆಗಳಲ್ಲಿ ಇರುವ ಕೌಶಲ್ಯಾಭಿವೃದ್ಧಿ ಇಲಾಖೆ, ಜಿಲ್ಲಾ ಪಂಚಾಯಿತಿಗಳು ಸೇರಿದಂತೆ ಅನೇಕ ಕಡೆ ನಿಯೋಜನೆಗೊಂಡಿದ್ದಾರೆ. ಹೀಗೆ ಹೋದವರು ಅಲ್ಲಿಯೇ ಬಹಳಷ್ಟು ವರ್ಷಗಳಿಂದ ಆಯಕಟ್ಟಿನ ಜಾಗದಲ್ಲಿ ನೆಲೆಯೂರಿದ್ದಾರೆ. ಈಗ ಅವರನ್ನು ಪುನಃ ಸಹಕಾರ ಇಲಾಖೆಗೆ ವಾಪಸ್ ಕರೆಸಿಕೊಳ್ಳುವ ಪ್ರಕ್ರಿಯೆಗೆ ಸಚಿವರು ಚಾಲನೆ ನೀಡಿದ್ದಾರೆ.

ಸಹಕಾರ ಇಲಾಖೆ ಈಗ ಹಿಂದೆಂದಿಗಿಂತಲೂ ಬಹಳ ಚುರುಕಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಈ ಕೆಲದ ಒತ್ತಡಕ್ಕೆ ಸಿಬ್ಬಂದಿ ಸಾಲುತ್ತಿಲ್ಲ. ಹಲವು ಬ್ಯಾಂಕ್ ಗಳಲ್ಲಿ ಸಾಲ ವಸೂಲಾತಿಯ ಸಮಸ್ಯೆಯಾಗುತ್ತಿದೆ. ಜೊತೆಗೆ ಸಮಯಕ್ಕೆ ಸರಿಯಾಗಿ ಕೆಲಸವನ್ನು ಪೂರ್ತಿಗೊಳಿಸಲು ಆಗುತ್ತಿಲ್ಲ. ಹೀಗಾಗಿ ಹಾಕಿಕೊಂಡ ಗುರಿ (ಟಾರ್ಗೆಟ್) ಮುಟ್ಟಲೂ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸುವಾಗ ಈ ವಿಷಯ ಗಮನಕ್ಕೆ ಬಂದಿದೆ.

ಇದರಿಂದ ಅಸಮಾಧಾನಗೊಂಡ ಸಚಿವರು, ಹೀಗೆ ಯಾವ ಯಾವ ಕಡೆ ಇಲಾಖೆಯ ಎಷ್ಟೆಷ್ಟು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ? ಇಲಾಖೆಯಲ್ಲಿ ಎಲ್ಲೆಲ್ಲಿ ಯಾವ ಯಾವ ಹುದ್ದೆಗಳಿಗೆ ಅತಿ ಅವಶ್ಯಕತೆ ಇದೆ ಎಂಬ ಬಗ್ಗೆ ತಕ್ಷಣ ತಮಗೆ ವರದಿ ಸಲ್ಲಿಸಬೇಕು ಎಂದು ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮಂಡ್ಯದಿಂದ ಬರುವವರ ಮೇಲೆ ತೀವ್ರ ನಿಗಾ ಇಡುವಂತೆ ಮೈಸೂರು ಉಸ್ತುವಾರಿ ಸಚಿವ ಸೋಮಶೇಖರ್ ಸೂಚನೆ

ಸಹಕಾರ ಇಲಾಖೆ ಹಾಗೂ ಲೆಕ್ಕ ಪರಿಶೋಧನಾ ಇಲಾಖೆಯಿಂದ ಉಪ ನಿಬಂಧಕರು, ಉಪ ನಿರ್ದೇಶಕರು, ಜಂಟಿ ನಿಬಂಧಕರು, ಜಂಟಿ ನಿರ್ದೇಶಕರು ಹಾಗೂ ಅಪರ ನಿಬಂಧಕರು, ಅಪರ ನಿರ್ದೇಶಕರು ಹಾಗೂ ಸಚಿವರ ಆಪ್ತ ಕಾರ್ಯದರ್ಶಿ ಹೀಗೆ ಹಲವಾರು ವರ್ಷಗಳಿಂದ ಇನ್ನಿತರ ಇಲಾಖೆಗಳಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದು, ಇಂಥವರನ್ನು ಕೂಡಲೇ ಮಾತೃ ಇಲಾಖೆಗೆ ಹಿಂದಿರುಗುವಂತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಎಸ್. ಟಿ. ಸೋಮಶೇಖರ್ ಪತ್ರದಲ್ಲಿ ಕೋರಿದ್ದಾರೆ.

ಮುಖ್ಯಮಂತ್ರಿಗಳ ಸಹಮತ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ಸಹಕಾರ ಇಲಾಖೆ ಸಭೆ ನಡೆಸಿದ ಸಂದರ್ಭದಲ್ಲಿ ಸಚಿವ ಸೋಮಶೇಖರ್, ಇಲಾಖೆಯ ಸಿಬ್ಬಂದಿ ಬೇರೆಡೆ ನಿಯೋಜನೆಗೊಂಡಿರುವ ಬಗ್ಗೆ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ತಕ್ಷಣವೇ ಕ್ರಮ ಕೈಗೊಂಡು ಮಾತೃ ಇಲಾಖೆ ಸೇವೆಗೆ ಬಳಸಿಕೊಳ್ಳಿ ಎಂದು ಸೂಚಿಸಿದ್ದಾರೆ

ಸಹಕಾರ ಸಚಿವರ ಈ ದಿಟ್ಟ ನಡೆಯಿಂದ ಸಹಕಾರ ಇಲಾಖೆಗೆ ಮತ್ತಷ್ಟು ಬಲ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ. ಸರ್ಕಾರಗಳಲ್ಲಿ ಇಂತಹ ಹಲವಾರು ಲೋಪದೋಷಗಳು ಕಾಣಸಿಗುತ್ತವೆ. ಆದರೆ, ಅವುಗಳನ್ನು ಪತ್ತೆ ಹಚ್ಚಿ ಕಾರ್ಯರೂಪಕ್ಕೆ ತರುವ ಕೆಲಸ ಆಗಬೇಕಿದೆ. ಆದರೆ, ಆ ಕೆಲಸವನ್ನು ಈಗ ಸಚಿವ ಸೋಮಶೇಖರ್ ಅವರು ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಸಹಕಾರ ವಲಯದ ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಈ ರಾಜ್ಯಗಳಿಂದ ಹಿಂದಿರುಗಿದವರನ್ನು ಕ್ವಾರೆಂಟೈನ್‌ ಕಡ್ಡಾಯಗೊಳಿಸಲು ರಾಜ್ಯ ಸರ್ಕಾರ ನಿರ್ಧಾರ

'ನಾನು ಈಚೆಗೆ ವಿಕಾಸಸೌಧದ ಕಚೇರಿಯಲ್ಲಿ ಸಹಕಾರ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದಿದ್ದೆ. ಆ ವೇಳೆ, ನಮ್ಮಲ್ಲಿ ಸಾಕಷ್ಟು ಸಿಬ್ಬಂದಿ ನೇಮಕವಾಗಿದ್ದರೂ ಬೇರೆ ಬೇರೆ ಇಲಾಖೆಯಲ್ಲಿ ಡೆಪ್ಯುಟೇಷನ್ ಮೇಲೆ ಕಾರ್ಯನಿರ್ವಹಿಸುತ್ತಿರುವುದರ ಬಗ್ಗೆ ಗಮನಕ್ಕೆ ಬಂತು. ನಮ್ಮ ಇಲಾಖೆಯಲ್ಲಿಯೇ ಸಾಕಷ್ಟು ಕೆಲಸಗಳು ಬಾಕಿ ಇರುವಾಗ ಹೇಗೆ ಅವರನ್ನು ಡೆಪ್ಯುಟೇಷನ್ ಮೂಲಕ ಕಳುಹಿಸಲಾಗಿದೆಯೋ ಅರ್ಥವಾಗಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯನ್ನು ಬಲಗೊಳಿಸಬೇಕಿದ್ದು, ಅವರನ್ನೆಲ್ಲ ವಾಪಸ್ ಕರೆಸಿಕೊಳ್ಳಲು ಪತ್ರ ಬರೆದಿದ್ದೇನೆ. ಇದಕ್ಕೆ ಮುಖ್ಯಮಂತ್ರಿಗಳು ಸಹ ಸಹಮತ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕ್ರಮಗಳನ್ನು ತೆಗೆದುಕೊಂಡು ಇಲಾಖೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವೆ' ಎಂದು ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Zee News Kannada

#Hashtags