ಬೆಂಗಳೂರು, ಜನವರಿ 22; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಚುನಾವಣಾ ಆಯೋಗವೂ ಸಿದ್ಧತೆ ಮಾಡಿಕೊಳ್ಳುತ್ತಿದೆ. ಚುನಾವಣೆ ದಿನಾಂಕ ಘೋಷಣೆಯಾದ ತಕ್ಷಣ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುತ್ತದೆ.
ಕರ್ನಾಟಕ ಸರ್ಕಾರ ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯನ್ನು ಈಡೇರಿಸಿದೆ.
Breaking; 7ನೇ ವೇತನ ಆಯೋಗ, ಸಿಬ್ಬಂದಿ ನಿಯೋಜನೆ ಆದೇಶ
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಭೇಟಿ ಮಾಡಿದೆ. ಸಂಘದ ಪದಾಧಿಕಾರಿಗಳಾದ ಆರ್. ಶ್ರೀನಿವಾಸ್, ಮಲ್ಲಿಕಾರ್ಜುನ ಬಳ್ಳಾರಿ, ಎಂ. ವಿ. ರುದ್ರಪ್ಪ, ಬಸವರಾಜು ಮುಂತಾದವರು ನಿಯೋಗದಲ್ಲಿದ್ದರು.
Karnataka 7th pay commission; ಸರ್ಕಾರಿ ನೌಕರರಿಗೆ ಪ್ರಶ್ನಾವಳಿಗಳು
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಯಾಗಿ ಮಾದರಿ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ. ವರದಿಯನ್ನು ಸರ್ಕಾರಕ್ಕೆ ತ್ವರಿತವಾಗಿ ಸಲ್ಲಿಸುವುದಾಗಿಯೂ ಆಯೋಗ ಭರವಸೆ ನೀಡಿದೆ.
7ನೇ ವೇತನ ಆಯೋಗ, ಸರ್ಕಾರದ ಮತ್ತೊಂದು ಆದೇಶ
ಸರ್ಕಾರಿ ನೌಕರರ ವೇತನ, ಭತ್ಯೆಗಳ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹಿಂದಿನ ಎರಡು ವೇತನ ಆಯೋಗಗಳು ಎರಡು ಹಂತಗಳಲ್ಲಿ ವರದಿ ನೀಡಿವೆ. ಅದರಂತೆ 7ನೇ ವೇತನ ಆಯೋಗವೂ ಫೆಬ್ರವರಿ ಅಂತ್ಯದ ಒಳಗೆ ವೇತನ ನಿಗದಿ ಸೌಲಭ್ಯದ (ಫಿಟ್ಮೆಂಟ್) ಪ್ರಥಮ ಹಂತದ ವರದಿ ಸಲ್ಲಿಸಬೇಕಿದೆ.
ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗ ರಾಜ್ಯ ಸರ್ಕಾರಿ ನೌಕರರು ಹಾಲಿ ಪಡೆಯುತ್ತಿರುವ ವೇತನ ಭತ್ಯೆಗಳಿಗೆ ಗರಿಷ್ಠ ಪ್ರಮಾಣದ ಫಿಟ್ಮೆಂಟ್ ಸೌಲಭ್ಯ ನೀಡಲು ಶಿಫಾರಸು ಮಾಡಬೇಕು ಎಂದು 7ನೇ ವೇತನ ಆಯೋಗದ ಅಧ್ಯಕ್ಷ ಸುಧಾಕರ್ ರಾವ್ ಹಾಗೂ ಸದಸ್ಯರಿಗೆ ಮನವಿ ಮಾಡಿದೆ.
ಸಭೆಗಳನ್ನು ನಡೆಸಲಾಗುತ್ತಿದೆ
7ನೇ ವೇತನ ಆಯೋಗ ರಚನೆ ಆದೇಶದಲ್ಲಿ ಸರ್ಕಾರವು ಸರ್ಕಾರಿ ನೌಕರರು ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು, ಸ್ಥಳೀಯ ಸಂಸ್ಥೆಗಳ ನೌಕರರು ಹಾಗೂ ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿಗಳ ವೇತನ, ತುಟ್ಟಿಭತ್ಯೆ ಹಾಗೂ ಇತರ ಸೌಲಭ್ಯಗಳ ಬಗ್ಗೆ ಪರಿಶೀಲಿಸಿ, ಪರಿಷ್ಕರಿಸಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಿದೆ.
ನೌಕರರ ಸಂಘ ಈಗಾಗಲೇ ವೃಂದ ಸಂಘಗಳ ಸಭೆಗಳನ್ನು ಕರೆದು ವೇತನ ಭತ್ಯೆಗಳ ಮಾಹಿತಿ ಸಂಗ್ರಹ ಮಾಡಿದೆ. ವಿವಿಧ ಇಲಾಖೆಗಳ ಸಮಗ್ರ ಮಾಹಿತಿ ವರದಿಯನ್ನು ವಾರದ ಒಳಗೆ ಆಯೋಗಕ್ಕೆ ಸಲ್ಲಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ.
ಪ್ರಶ್ನಾವಳಿಯನ್ನು ಬಿಡುಗಡೆ ಮಾಡಲಾಗಿದೆ
7ನೇ ರಾಜ್ಯ ವೇತನ ಆಯೋಗಕ್ಕೆ ವಹಿಸಲಾಗಿರುವ ಪರಿಶೀಲನಾಂಶಗಳ ಕುರಿತಂತೆ ಈಗ ರಾಜ್ಯಪತ್ರ ಪ್ರಕಟಿಸಲಾಗಿದೆ. ಸಾರ್ವಜನಿಕರು, ಸೇವಾ ಸಂಘಗಳು ಹಾಗೂ ಸರ್ಕಾರಿ ನೌಕರರು ಅಲ್ಲದೇ, ಇಲಾಖೆಗಳಿಂದ, ಸಂಸ್ಥೆಗಳಿಂದ ಮಾಹಿತಿ ಹಾಗೂ ಮುಕ್ತ ಸಲಹೆಗಳನ್ನು ಪಡೆಯುವ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ಆಯೋಗವು ಈಗ ಪ್ರಶ್ನಾವಳಿಗಳನ್ನು ಕನ್ನಡ ಮತ್ತು ಆಂಗ್ಲ ಭಾಷೆಯಲ್ಲಿ ತಯಾರಿಸಿ, ಬಿಡುಗಡೆ ಮಾಡಿದೆ.
ಸರ್ಕಾರದ ಅಮುಕಾ/ ಪ್ರಕಾ/ ಕಾರ್ಯದರ್ಶಿಗಳು, ಇಲಾಖಾ ಮುಖ್ಯಸ್ಥರು, ವಿಶ್ವವಿದ್ಯಾನಿಲಯಗಳು, ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ಸರ್ಕಾರಿ ನೌಕರರು, ನಿವೃತ್ತ ವೇತನದಾರರು ಹಾಗೂ ಆಸಕ್ತ ಸಾರ್ವಜನಿಕರು, ಉತ್ತರಗಳನ್ನು, ಅನಿಸಿಕೆ ಹಾಗೂ ಮುಕ್ತ ಸಲಹೆಗಳನ್ನು 10/2/2023 ರೊಳಗೆ ಸಲ್ಲಿಸುವಂತೆ ಹೇಳಿದೆ.
ಭತ್ಯೆಗಳ ಪರಿಷ್ಕರಣೆ ಬಗ್ಗೆ
ಈಗ ರಚನೆಯಾಗಿರುವ 7ನೇ ರಾಜ್ಯ ವೇತನ ಆಯೋಗವು, ನಿವೃತ್ತಿ ವೇತನ, ತುಟ್ಟಿ ಭತ್ಯೆ, ಮನೆ ಬಾಡಿಗೆ ಭತ್ಯೆ, ನಗರ ಪರಿಹಾರ ಭತ್ಯೆ, ವೈದ್ಯಕೀಯ ಸೌಲಭ್ಯ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆಯೂ ಅವಶ್ಯವಿರುವ ಬದಲಾವಣೆಗಳ ಕುರಿತು ಸಹ ಶಿಫಾರಸ್ಸು ಮಾಡಲಿದೆ.
ಸಾಮಾನ್ಯವಾಗಿ 5 ವರ್ಷಗಳಿಗೊಮ್ಮೆ ವೇತನ ಆಯೋಗ ಅಥವಾ ವೇತನ ಸಮಿತಿಯ ಶಿಫಾರಸ್ಸು ಆಧರಿಸಿ ಸರ್ಕಾರಿ ನೌಕರರು ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿಗಳು, ಸ್ಥಳೀಯ ಸಂಸ್ಥೆಗಳ ಸಿಬ್ಬಂದಿಗಳು ಹಾಗೂ ವಿಶ್ವವಿದ್ಯಾನಿಲಯದ ಬೋಧಕೇತರ ಸಿಬ್ಬಂದಿಗಳ ವೇತನ ಹಾಗೂ ಭತ್ಯೆಗಳ ಪರಿಷ್ಕರಣೆ ಮಾಡಲಾಗುತ್ತದೆ.
6ನೇ ರಾಜ್ಯ ವೇತನ ಆಯೋಗದ ಶಿಫಾರಸ್ಸು ಆಧಾರದ ಮೇಲೆ ವೇತನ ಭತ್ಯೆಗಳನ್ನು, ದಿನಾಂಕ 01/7/2017 ರಿಂದ ಜಾರಿಗೆ ಬರುವಂತೆ ಹಾಗೂ ಆರ್ಥಿಕ ಪ್ರಯೋಜನಗಳು ದಿನಾಂಕ 01/04/2018 ರಿಂದ ಅನ್ವಯವಾಗುವಂತೆ 2018 ರಲ್ಲಿ ಪರಿಷ್ಕರಿಸಲಾಗಿತ್ತು.
By Gururaj S Oneindia
source: oneindia.com
Disclaimer
This story is auto-aggregated by a computer program and has not been created or edited by Dailyhunt Publisher: OneIndia Kannada