ಬೆಂಗಳೂರು, ಜನವರಿ 10; ರಾಜ್ಯದ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಕರ್ನಾಟಕ ಸರ್ಕಾರ 7ನೇ ವೇತನ ಆಯೋಗವನ್ನು ರಚನೆ ಮಾಡಿ ಆದೇಶ ಹೊಡಿಸಿದೆ. ಆಯೋಗದ ಕಚೇರಿಗೆ ಸ್ಥಳ ನಿಗದಿ ಮಾಡಿದ್ದು, ಸಿಬ್ಬಂದಿ ಸಹ ನೇಮಕ ಮಾಡಲಾಗಿದೆ.
ರಾಜ್ಯ ವೇತನ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿಗಳಾಗಿದ್ದ ಸುಧಾಕರ್ ರಾವ್ ನೇಮಕ ಮಾಡಲಾಗಿದೆ.
7ನೇ ವೇತನ ಆಯೋಗದ ಸದಸ್ಯ ಕಾರ್ಯದರ್ಶಿಯಾದ ಹೆಬ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ಬುಧವಾರ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ ನೇತೃತ್ವದ ನಿಯೋಗವು ಭೇಟಿ ಮಾಡಿತು.
ಸಂಘದ ಪದಾಧಿಕಾರಿಗಳೊಂದಿಗೆ 7ನೇ ವೇತನ ಆಯೋಗದ ಸಭೆ ಏರ್ಪಡಿಸುವಂತೆ ಮನವಿ ಮಾಡಲಾಯಿತು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ವೇತನ ಆಯೋಗದ ಸದಸ್ಯ ಕಾರ್ಯದರ್ಶಿಗಳು ಶೀಘ್ರವೇ ಸಭೆ ಏರ್ಪಡಿಸಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ.
ಆಯೋಗದ ಸದಸ್ಯರು; ಸುಧಾಕರ್ ರಾವ್ ಅಧ್ಯಕ್ಷತೆಯಲ್ಲಿ ವೇತನ ಆಯೋಗ ರಚನೆ ಮಾಡಿದ್ದ ಕರ್ನಾಟಕ ಸರ್ಕಾರ ಆಯೋಗಕ್ಕೆ ಅಗತ್ಯ ಸಿಬ್ಬಂದಿಗಳನ್ನು ನೇಮಕ ಮಾಡಿತ್ತು. ಅಲ್ಲದೇ ಕಾರ್ಯದರ್ಶಿ (ಐಎಎಸ್ ವೃಂದ) 1, ಅಪರ/ ಜಂಟಿ/ ಉಪ ಕಾರ್ಯದರ್ಶಿ/ ವಿಶೇಷಾಧಿಕಾರಿ 3, ಜಂಟಿ/ ಉಪ/ ಸಹಾಯಕ ನಿರ್ದೇಶಕರು (ಅಂಕಿ-ಅಂಶ) 1, ಅಧೀನ ಕಾರ್ಯದರ್ಶಿ/ ಆಪ್ತ ಕಾರ್ಯದರ್ಶಿ 6, ಶಾಖಾಧಿಕಾರಿ 2, ಹಿರಿಯ ಸಹಾಯಕರು/ ಸಹಾಯಕರು/ ಶೀಘ್ರಪಿಲಿಗಾರರು/ ಕಿರಿಯ ಸಹಾಯಕರು/ ಬೆರಳಚ್ಚುಗಾರರು/ ಡಾಟಾ ಎಂಟ್ರಿ ಆಪರೇಟರ್ ಹಾಗೂ ಇತರೆ ಗ್ರೂಪ್ ಸಿ ವೃಂದದ ಹುದ್ದೆಗಳು 25, ದಲಾಯತ್ 6 ಹುದ್ದೆಗಳನ್ನು ಭರ್ತಿ ಮಾಡಲಾಗಿದೆ.
ವೇತನ ಆಯೋಗಕ್ಕೆ ಸುಧಾಕರ್ ರಾವ್ ಅಧ್ಯಕ್ಷರು, ಪಿ. ಬಿ. ರಾಮಮೂರ್ತಿ ಮತ್ತು ಶ್ರೀಕಾಂತ್ ಬಿ. ವನಹಳ್ಳಿ ಸದಸ್ಯರು ಹಾಗೂ ಮೌಲ ಸೌಲಭ್ಯ ಇಲಾಖೆ ಜಂಟಿ ಕಾರ್ಯದರ್ಶಿ ಹೆಫ್ಸಿಬಾ ರಾಣಿ ಕೊರ್ಲಪಾಟಿ ಸದಸ್ಯ ಕಾರ್ಯದರ್ಶಿಯಾಗಿದ್ದಾರೆ. ಅಲ್ಲದೇ 7ನೇ ವೇತನ ಆಯೋಗ ಸಮಿತಿಯು ಕಾರ್ಯ ನಿರ್ವಹಿಸಲು ಔಷಧ ನಿಯಂತ್ರಣ ಇಲಾಖೆಯ ಜಾಗವನ್ನು ತಾತ್ಕಾಲಿಕವಾಗಿ ನೀಡಲಾಗಿದೆ.
By Gururaj S Oneindia
source: oneindia.com
Disclaimer
This story is auto-aggregated by a computer program and has not been created or edited by Dailyhunt Publisher: OneIndia Kannada