Karnataka Lockdown: ಸಚಿವರು-ಶಾಸಕರು, ಸರ್ಕಾರಿ ನೌಕರರ 1 ತಿಂಗಳ ವೇತನ ಕಡಿತ; ಕೋವಿಡ್ ನಿರ್ವಹಣೆಗೆ ಹಣ ಬಳಕೆ!
26 Apr 2021.4:10 PM
ಬೆಂಗಳೂರು : ಕೊರೋನಾ ಬೇಗೆಯಲ್ಲಿ ಬೇಯುತ್ತಿರುವ ಕರ್ನಾಟಕವನ್ನು ಪಾರು ಮಾಡಲು ರಾಜ್ಯ ಸರ್ಕಾರ ಮತ್ತೆ ಲಾಕ್ಡೌನ್ ಮೊರೆ ಹೋಗಿದೆ. ನಾಳೆಯಿಂದ 14 ದಿನಗಳ ಕಾಲ ಇಡೀ ರಾಜ್ಯ ಬಹುತೇಕ ಸ್ತಬ್ಧವಾಗಲಿದೆ. ಲಾಕ್ಡೌನ್ನಿಂದ ಆರ್ಥಿಕತೆಗೆ ಹೊಡೆತ ಬೀಳಲಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಲಿದೆ. ರಾಜ್ಯದ ಮೇಲೆ ಲಾಕ್ಡೌನ್ ಹೇರಿ ಕೋವಿಡ್ ಪರಿಸ್ಥಿತಿಯನ್ನು ನಿರ್ವಹಿಸುವ ಒತ್ತಡದಲ್ಲಿ ಸರ್ಕಾರವಿದೆ. ಈ ಹಿನ್ನೆಲೆಯಲ್ಲಿ ಲಾಕ್ಡೌನ್ ನಷ್ಟವನ್ನು ಸರಿದೂಗಿಸಲು ಪೊಲೀಸ್, ಆರೋಗ್ಯ ಇಲಾಖೆಯನ್ನು ಹೊರತುಪಡಿಸಿದ ಸಚಿವರು, ಶಾಸಕರು, ಪರಿಷತ್ ಸದಸ್ಯರು, ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.
ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಸರ್ಕಾರಿ ಸಿಬ್ಬಂದಿಯ ವೇತನ ಕಡಿತ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಸಚಿವರು, ಶಾಸಕರು, ಪರಿಷತ್ ಸದಸ್ಯರು, ಸರ್ಕಾರಿ ನೌಕರರ ಒಂದು ತಿಂಗಳ ವೇತನ ಕಡಿತದಿಂದ 500 ಕೋಟಿಗೂ ಹೆಚ್ಚು ಹಣ ಸರ್ಕಾರಕ್ಕೆ ಉಳಿಯಲಿದೆ. ಈ ಹಣವನ್ನು ಕೋವಿಡ್ ನಿರ್ವಹಣೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ತಮ್ಮ 1 ತಿಂಗಳ ವೇತನ ಕಡಿತಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಕೋವಿಡ್ ಸಮಯದಲ್ಲಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆಯನ್ನು ವೇತನ ಕಡಿತದಿಂದ ಹೊರಗಿಡುವ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಆದರೆ ಇತರೆ ಸರ್ಕಾರಿ ಇಲಾಖೆಗಳ ನೌಕರರ ವೇತನ ಕಡಿತದ ನಿರ್ಧಾರದಿಂದ ಅಸಮಾಧಾನ ಭುಗಿಲೇಳುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ.
ಇನ್ನು ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀಕರತೆಗೆ ಕಡಿವಾಣ ಹಾಕಲು ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್ಡೌನ್ ಮಾಡಿ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವೀಕೆಂಡ್ ಕರ್ಫ್ಯೂ ಯಶಸ್ಸಿನ ಬೆನ್ನಲ್ಲೇ ನಾಳೆ ರಾತ್ರಿಯಿಂದ 14 ದಿನಗಳ ಕಾಲ ಲಾಕ್ಡೌನ್ ಹೇರಲು ಸರ್ಕಾರ ನಿರ್ಧರಿಸಿದೆ.
ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್.ಯಡಿಯೂರಪ್ಪ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. 2 ವಾರಗಳ ಕಾಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2 ವಾರದಲ್ಲಿ ಕೊರೋನಾ ಕಂಟ್ರೋಲ್ಗೆ ಬರದಿದ್ದರೆ ಲಾಕ್ಡೌನ್ ಮುಂದುವರೆಯುವ ಸುಳಿವನ್ನು ಕೊಟ್ಟಿದ್ದಾರೆ.
Disclaimer
Disclaimer
This story is auto-aggregated by a computer program and has not been created or edited by Dailyhunt Publisher: News18 Kannada