2nd PU results: ಪಾಸ್ ಮಾಡಿದ್ರೆ ಎಲ್ಲರನ್ನೂ ಮಾಡಿ, ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದ ಹೈಕೋರ್ಟ್
15 Jun 2021.1:41 PM
ಬೆಂಗಳೂರು(ಜೂ.15): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸುವ ಸರ್ಕಾರಕ್ಕೆ ಹೈಕೋರ್ಟ್ ಈಗ ಶಾಕ್ ನೀಡಿದೆ. ಕೇವಲ ಫ್ರೆಶರ್ಸ್ನ್ನು ಮಾತ್ರ ಪಾಸ್ ಮಾಡಿ ರಿಪೀಟರ್ಸ್ಗೆ ಮಾಮೂಲಿ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ. ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಬಳಿಕ ರಿಪೀಟರ್ಸ್ ತಮಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದು, ಸದ್ಯ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದೆ.
ಹೌದು, ರೆಗ್ಯೂಲರ್ ವಿದ್ಯಾರ್ಥಿಗಳಿಗೊಂದು ನ್ಯಾಯ, ರಿಪೀಟರ್ಸ್ಗೆ ಒಂದು ನ್ಯಾಯ ನೀಡಿದ್ದ ಸರ್ಕಾರಕ್ಕೆ ಈಗ ಹಿನ್ನಡೆಯಾಗಿದೆ. ರೆಗ್ಯೂಲರ್ ವಿದ್ಯಾರ್ಥಿಗಳನ್ನು ಮಾತ್ರ ಪಾಸ್ ಮಾಡಿರೋದು ಸರಿಯಲ್ಲ. ಪಾಸ್ ಮಾಡಿದ್ರೆ ಎಲ್ಲರನ್ನೂ ಮಾಡಬೇಕಿತ್ತು. ರೆಗ್ಯುಲರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ರಿಪೀಟರ್ಸ್ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಹೈಕೋರ್ಟ್ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ. ಗುರುವಾರದ ತನಕ ಪಿಯುಸಿ ಫಲಿತಾಂಶ ಪ್ರಕಟ ಮಾಡದಿರುವಂತೆ ಹೈಕೋರ್ಟ್ ಸೂಚಿಸಿದೆ. ಈ ವಿಚಾರ ಕುರಿತು ಸರ್ಕಾರದ ಅಡ್ವೋಕೇಟ್ ಜನರಲ್ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಸಿಂಗ್ರೇಗೌಡ ಎಂಬುವರು ರಿಪೀಟರ್ಸ್ ಪರವಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
:
ಕೊರೋನಾ ಕಾರಣದಿಂದಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಎಸ್ಎಸ್ಎಲ್ಸಿ ಹಾಗೂ ಪ್ರಥಮ ಪಿಯುಸಿ ಅಂಕಗಳ ಆಧಾರದ ಮೇಲೆ ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡುವುದಾಗಿ ಹೇಳಿತ್ತು. ಇದಾದ ಕೆಲವು ದಿನಗಳ ಬಳಿಕ ರೆಗ್ಯುಲರ್ ವಿದ್ಯಾರ್ಥಿಗಳನ್ನು ಮಾತ್ರ ಪಾಸ್ ಮಾಡಲಾಗಿದ್ದು, ರಿಪೀಟರ್ಸ್ಗೆ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದರು. ಇದು ರಿಪೀಟರ್ಸ್ಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಹೀಗಾಗಿ ಅವರು ಕೋರ್ಟ್ ಮೊರೆ ಹೋಗಿದ್ದರು. ಸದ್ಯಕ್ಕೆ ಹೈಕೋರ್ಟ್ ಪಿಯು ಫಲಿತಾಂಶಕ್ಕೆ ತಡೆ ನೀಡಿ ಮೌಖಿಕ ಆದೇಶ ಹೊರಡಿಸಿದೆ.
ಪಾಸ್ ಮಾಡಿದರೆ ಎಲ್ಲರನೂ ಪಾಸ್ ಮಾಡಬೇಕು ಎಂದು ರಿಪೀಟರ್ಸ್ ಪರ ವಕೀಲ ಹೇಳಿದ್ದಾರೆ. ಕೊರೋನಾ ಇರುವ ಕಾರಣ, ರಿಪೀಟರ್ಸ್ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಹೀಗಾಗಿ ಅವರನ್ನು ಪಾಸ್ ಮಾಡಿ ಎಂದು ಒತ್ತಾಯಿಸಿದ್ದಾರೆ. ಸದ್ಯಕ್ಕೆ ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ಬ್ರೇಕ್ ಹಾಕಿದೆ. ಹೀಗಾಗಿ ಸರ್ಕಾರ ರಿಪೀಟರ್ಸ್ಗಳನ್ನು ಪಾಸ್ ಮಾಡುವ ನಿರ್ಧಾರ ಕೈಗೊಳ್ಳುತ್ತಾ ಎಂದು ಕಾದು ನೋಡಬೇಕಿದೆ. ಜೊತೆಗೆ ಯಾವ ಮಾನದಂಡದ ಆಧಾರದ ಮೇಲೆ ಪಾಸ್ ಮಾಡುತ್ತೆ ಎನ್ನುವ ವಿಷಯವೂ ಸಹ ಕಾತರವಾಗಿದೆ.
ಇನ್ನು, ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸುವುದಾಗಿ ಶಿಕ್ಷಣ ಇಲಾಖೆ ಹೇಳಿದೆ. 3 ವಿಷಯಗಳಿಗೆ 1 ಪ್ರಶ್ನೆ ಪತ್ರಿಕೆ ಸಿದ್ದಪಡಿಸಿ ಎಕ್ಸಾಂ ನಡೆಸಲಾಗುವುದು, ಪ್ರಶ್ನೆ ಪತ್ರಿಕೆ ಸರಳವಾಗಿರುತ್ತದೆ. ಯಾರನ್ನೂ ನಪಾಸು ಮಾಡುವುದಿಲ್ಲ ಎಂದೂ ಸಹ ಹೇಳಲಾಗಿದೆ.
ಶಿಕ್ಷಣ ಇಲಾಖೆ ಮೊದಲು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿದೆ ಎಂದು ಹೇಳಿತ್ತು. ಆದರೆ ಮತ್ತೆ ಕೆಲವೇ ದಿನಗಳಲ್ಲಿ ಪ್ರಥಮ ಪಿಯು ವಿದ್ಯಾರ್ಥಿಗಳಿಗೂ ಪರೀಕ್ಷೆ ಇದೆ, ಆನ್ಲೈನ್ನಲ್ಲಿ ಎಕ್ಸಾಂ ನಡೆಸಲಾಗುತ್ತದೆ ಎಂದು ಹೇಳಿದೆ. ಹೀಗೆ ಶಿಕ್ಷಣ ಇಲಾಖೆ ಕೆಲವೊಮ್ಮೆ ಯಡವಟ್ಟಿನ ನಿರ್ಧಾರಗಳನ್ನು ತೆಗೆದುಕೊಂಡು, ವಿದ್ಯಾರ್ಥಿಗಳನ್ನು ಇಕ್ಕಟ್ಟಿನ ಪರಿಸ್ಥಿತಿಗೆ ಸಿಲುಕಿಸುತ್ತಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
Disclaimer
Disclaimer
This story is auto-aggregated by a computer program and has not been created or edited by Dailyhunt Publisher: News18 Kannada